ಜಯನಗರದ ರಾಷ್ಟ್ರೋತ್ಥಾನ ಕೇಂದ್ರದಲ್ಲಿ ‘ಮಂಥನ’ ಜಯನಗರ ವೇದಿಕೆಯ ವತಿಯಿಂದ ಸ್ವಾತಂತ್ರ್ಯದ 75ನೇ ವರ್ಷಾಚರಣೆಯ ಪ್ರಯುಕ್ತ, ಸ್ವರಾಜ್ಯ-75ರ ಕಾರ್ಯಕ್ರಮ ಜರುಗಿತು. ಖ್ಯಾತ ಆಯುರ್ವೇದ ವೈದ್ಯೆ ಡಾ|| ಶುಭಮಂಗಳ ಆಚಾರ್ಯರ ಅಧ್ಯಕ್ಷತೆಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಆರೆಸ್ಸೆಸ್ ನ ಕರ್ನಾಟಕ ದಕ್ಷಿಣ ಪ್ರಾಂತದ ಸಹ ಪ್ರಚಾರ ಪ್ರಮುಖರಾದ ಶ್ರೀ ರಾಜೇಶ್ ಪದ್ಮಾರ್ ಅವರು ವಿಚಾರ ಮಂಡನೆ ಮಾಡಿದರು.

ಕಾರ್ಯಕ್ರಮದಲ್ಲಿ ಅಖಂಡ ಭಾರತದ ಚಿತ್ರಣ ಭಾರತದ ಮೇಲೆ ಮೊಘಲರು, ಡಚ್ಚರು, ಬ್ರಿಟೀಷರು ಆಕ್ರಮಣ ಮಾಡಿದ ಬಗೆ ಹಾಗು ಅಖಂಡ ಭಾರತದಿಂದ ಇಂದಿನ ಭಾರತ ಹೊಂದಿರುವ ಭೂಪ್ರದೇಶದ ಮಾಹಿತಿಯನ್ನು ವಿವರಿಸದ್ದಲ್ಲದೆ ಬೇರೆ ರಾಷ್ಟ್ರಗಳ ಸಂಸ್ಕೃತಿ ನಾಶವಾದ ಬಗೆ ಮತ್ತು ಭಾರತ ಮೇಲೆ ನೂರಾರು ವರ್ಷಗಳ ಕಾಲ ಆಕ್ರಮಣವಾದರೂ ನಮ್ಮ ಪುರಾತನ ಸಂಸ್ಕೃತಿ ಉಳಿದು ಬಂದ ಹಾದಿಯನ್ನು ವಿವರವಾಗಿ ಶ್ರೀ ರಾಜೇಶ್ ಪದ್ಮಾರ್ ತಿಳಿಸಿಕೊಟ್ಟರು. ಮೇಲು ಕೀಳುಗಳ ವಿರುದ್ಧ ಹೋರಾಡಬೇಕಿದೆ. ಮುಂದಿನ ಪೀಳಿಗೆಗೆ ನಮ್ಮ ದೇಶಕ್ಕೆ ಸ್ವಾತಂತ್ರ ಸಿಕ್ಕ ಬಗೆ ಹಾಗೂ ಅದಕ್ಕಾಗಿ ತಮ್ಮ ಸರ್ವಸ್ವವನ್ನು ಧಾರೆಯೆರೆದು ‘ದೇಶ ಮೊದಲು’ ಎಂದು ಪ್ರಾಣಾರ್ಪಣೆ ಮಾಡಿದ ಮಹಾನ್ ನಾಯಕರ ಬಗ್ಗೆ ತಿಳಿಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದರು.
ಸ್ವಾತಂತ್ರ್ಯ ಹೋರಾಟದಲ್ಲಿ 5 ಬಗೆಯ ಹೋರಾಟವನ್ನು ಗುರುತಿಸಬಹುದು. ಕ್ರಾಂತಿಕಾರಿಗಳ ಸಶಸ್ತ್ರ ಹೋರಾಟ, ಅಹಿಂಸಾತ್ಮಕ ಹೋರಾಟ, ಸಾಹಿತ್ಯ, ಲೇಖನಗಳ ಪ್ರಸಾರ, ಸಾಮಾಜಿಕ ಸುಧಾರಣೆಗಳು, ಸಂತರ ದಿಗ್ದರ್ಶನ. ಇದು ಸಂಪೂರ್ಣ ಭಾರತದಲ್ಲಿ ನಡೆದ ಒಂದು ಬಹುಮುಖ ಹೋರಾಟ ಎಂದರು.
ಮೋದಿಯವರು ಆಗಸ್ಟ್ ೧೪ರ ದಿನವನ್ನು Partition horrors Remembrance day ಎಂದು ಘೋಷಿಸಿದ್ದಾರೆ. ಇದರ ಬಗ್ಗೆ ನಾವೆಲ್ಲ ಅರಿತುಕೊಳ್ಳಬೇಕಾಗಿದೆ ಎಂದರು.
ಡಾ|| ಅಂಬೇಡ್ಕರ್ ರವರು ಸಂವಿಧಾನದ ಮುನ್ನುಡಿಯಲ್ಲಿ ಸಮಾನತೆ, ನ್ಯಾಯ, ಭ್ರಾತೃತ್ವ ಮತ್ತು ಸ್ವಾತಂತ್ರ್ಯವನ್ನು ಸೇರಿಸಿದ್ದಾರೆ. ಭ್ರಾತೃತ್ವ ಬರಲು ಆಧ್ಯಾತ್ಮಿಕ ಜಾಗೃತಿ ಮುಖ್ಯ. ಜಾಗೃತ ಸಾಮಾಜ ಇಂದು ಅಗತ್ಯ ಎಂದು ಅವರು ಮಾತನಾಡಿದರು.
ಸಾಮ್ಯುಯೆಲ್ ಹಂಟಿಂಗ್ಟನ್ ಪ್ರಕಾರ ಭಾರತವು ತನ್ನ ಅಸ್ಮಿತೆಯನ್ನು ಉಳಿಸಿಕೊಂಡಿದೆ. ಸಮಾನ ಪೂರ್ವಜರ ಬಗ್ಗೆ ಪ್ರಜ್ಞೆ, ಸಮಾನ ಇತಿಹಾಸ ಪ್ರಜ್ಞೆ ಉಳಿಸಿಕೊಂಡಿದೆ.
ಪಾಶ್ಚಾತ್ಯರ ಪ್ರಕಾರ ರಾಷ್ಟ್ರವಾಗಲು 3C (Citizen, Currency, Cadet(ಜನ, ಹಣ, ಸೈನ್ಯ)) ಸಾಕು. ಆದರೆ ನಮ್ಮ ದೇಶದ ಮಟ್ಟಿಗೆ ನಾಲ್ಕನೆಯ C Culture ಅಥವಾ ಸಾಂಸ್ಕೃತಿಕ ರಾಷ್ಟ್ರೀಯತೆ ಅತಿಮುಖ್ಯವಾದದ್ದು ಎಂಬುದನ್ನು ನಾವು ಅರ್ಥ ಮಾಡಿಕೊಳ್ಳಬೇಕು ಎಂದರು.
